PM Narendra Modi: ಪ್ರಧಾನಿ ಭೇಟಿಯಾದ ಕೇರಳದ ಪಾದ್ರಿಗಳು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಎಸ್‌ಸಿ ಮೀಸಲಾತಿ ನೀಡುವಂತೆ ಮನವಿ!

ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೇರಳದ ಕೆಲವು ಚರ್ಚ್‌ಗಳ ಪ್ರಮುಖ ಪಾದ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ

ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೇರಳದ ಕೆಲವು ಚರ್ಚ್‌ಗಳ ಪ್ರಮುಖ ಪಾದ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ದೇಶದಲ್ಲಿ ಕ್ರಿಶ್ಚಿಯನ್ನರ ಮೇಲೆ, ಚರ್ಚ್​ಗಳ ಮೇಲೆ ನಡೆಯುತ್ತಿರುವ ದಾಳಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕೇರಳದ ವಿವಿಧ ಚರ್ಚ್‌ಗಳ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
2024ರ ಲೋಕಸಭೆ ಚುನಾವಣೆಗೆ ಮುಂಚೆ ಕೇರಳದಲ್ಲಿ ಪ್ರಭಾವಿಯಾಗಿರುವ ಅಲ್ಪಸಂಖ್ಯಾತ ಸಮುದಾಯವನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಗಳಿಗೆ ಉತ್ತೇಜನವಾಗಿ ಚರ್ಚ್​ಗಳ ಪಾದ್ರಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ನಡೆದಿದೆ ಎನ್ನಲಾಗುತ್ತಿದೆ. ಇತ್ತೀಚಿಗೆ ತಮಿಳುನಾಡಿನಲ್ಲೂ ಮೋದಿ ಚರ್ಚ್​​ಗೆ ಭೇಟಿ ನೀಡಿದ್ದರು.

ಮೋದಿ ಅವರು, ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಜಾರ್ಜ್ ಅಲೆಂಚೇರಿ, ಸೈರೋ-ಮಲಂಕಾರ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಬಸೆಲಿಯೋಸ್ ಕ್ಲೀಮಿಸ್, ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಮುಖ್ಯಸ್ಥ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್, ಜಾಕೋಬೈಟ್ ಚರ್ಚ್‌ನ ಮೆಟ್ರೋಪಾಲಿಟನ್ ಟ್ರಸ್ಟಿ ಜೋಸೆಫ್ ಮೋರ್ ಗ್ರೆಗೋರಿಯೊಸ್ ಸೇರಿದಂತೆ 8 ಪ್ರಮುಖ ಚರ್ಚ್ ಪಾದ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಪಾದ್ರಿ ಆರ್ಚ್‌ಬಿಷಪ್ ಜೋಸೆಫ್ ಕಾಳತಿಪರಂಬಿಲ್, ಕ್ನಾನಾಯ ಚರ್ಚ್‌ನ ಆರ್ಚ್‌ಬಿಷಪ್ ಮ್ಯಾಥ್ಯೂ ಮೂಲಕ್ಕಾಟ್, ಕ್ನಾನಾಯಾ ಜಾಕೋಬೈಟ್ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಕುರಿಯಾಕೋಸ್ ಮಾರ್ ಸೆವೆರಿಯೋಸ್ ಮತ್ತು ಚಾಲ್ಡಿಯನ್ ಸಿರಿಯನ್ ಚರ್ಚ್‌ನ ಮೆಟ್ರೋಪಾಲಿಟನ್ ಮಾರ್ ಆವ್ಗಿನ್ ಕುರಿಯಾಕೋಸ್ ಅವರನ್ನೂ ಕೂಡ ಭೇಟಿ ಮಾಡಿದ್ದಾರೆ.
ಅಲ್ಪಸಂಖ್ಯಾತರನ್ನು ಹೆಚ್ಚು ಹೆಚ್ಚು ಮುಟ್ಟುವ ಪಕ್ಷದ ಕಾರ್ಯತಂತ್ರದ ಭಾಗವಾಗಿ, ಈಸ್ಟರ್ ಮತ್ತು ಈದ್ ಹಬ್ಬದ ಸಂದರ್ಭಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರ ಮನೆಗಳಿಗೆ ಕೇರಳದ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್​, ಪಾದ್ರಿಗಳ ಜೊತೆಗಿನ ಭೇಟಿ ಸ್ನೇಹ ಸೌಹಾರ್ದಯುತ ಭೇಟಿಯಷ್ಟೇ. ಭವಿಷ್ಯದಲ್ಲಿ ರಾಜ್ಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡುವ ಬಗ್ಗೆ, ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.

ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿ ಎಂದು ನಮ್ಮ ಪ್ರತಿಸ್ಪರ್ಧಿಗಳ ಸುಳ್ಳುಗಳು ಕ್ರಮೇಣ ಸುಳ್ಳು ಎಂಬುದು ಸಾಬೀತಾಗುತ್ತಿದೆ. ಬಿಜೆಪಿ ದೇಶದಲ್ಲಿ ವಿಸ್ತರಿಸುತ್ತಿದೆ. ಮೇಘಾಲಯ, ನಾಗಾಲ್ಯಾಂಡ್‌ ಮತ್ತು ಗೋವಾದಲ್ಲಿ ಸಂಭವಿಸಿದ ಜಯ ಇದಕ್ಕೆ ಕಾರಣ. ಮುಂಬರುವ ವರ್ಷಗಳಲ್ಲಿ ಕೇರಳದಲ್ಲಿಯೂ ಬಿಜೆಪಿಯು ಮೈತ್ರಿ ಸರ್ಕಾರ ರಚಿಸುವುದು ಖಚಿತ ಎಂದು ಮೋದಿ ಹೇಳಿದ್ದಾರೆ.


ಕೇರಳದ ಪ್ರಮುಖ ಪಾದ್ರಿಗಳ ಭೇಟಿ ಮಾಡಿದ ಪ್ರಧಾನಿ ಮೋದಿ | ಇದನ್ನು ಓದಿ

    ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ  

Post a Comment

0 Comments